ಈಗಿನ ಕಾಲದಲ್ಲಿ ೪ ಪ್ಯಾಕ್ ಹಾಗೂ ೬ ಪ್ಯಾಕ್ ಹುರಿಗೊಳಿಸುವ ಮೈಕಟ್ಟು ೮ ಪ್ಯಾಕ್ಗೆ ಬಂದು ನಿಂತಿದೆ. ಏನಾದರೂ ಹೊಸತನ್ನು ಮಾಡುತ್ತಿರು ತಮ್ಮ ಎಂಬ ನಾಣ್ಣುಡಿಗೆ ಬೆಲೆ ತೆತ್ತರೆ ಈ ಚಿತ್ರರಂಗದಲ್ಲಿ ಮುನ್ನುಗ್ಗಲು ಸಾಧ್ಯ. ಸುರದ್ರೂಪಿ ಯುವಕ ಚೇತನ್ ಚಂದ್ರ ಕೆಲವು ಸಿನಿಮಾಗಳಲ್ಲಿ ಅಭಿನಯ ನೀಡಿದ ನಂತರ ಇದೀಗ ೮ ಪ್ಯಾಕ್ ಮೈಕಟ್ಟನ್ನು ೬ ತಿಂಗಳ ಪರಿಶ್ರಮದಿಂದ ಹೆಸರಾಂತ ಕಿಟ್ಟಿ ಅವರ ಮಸಲ್ ಪ್ಲಾನೆಟ್ ಜಿಮ್ ಸೆಂಟರ್ನಿಂದ ಸಾಧ್ಯವಾಗಿಸಿಕೊಂಡಿದ್ದಾರೆ. ಕೇವಲ ಹೊಟ್ಟೆಯ ಭಾಗದಲ್ಲಿ ಚೇತನ್ ಚಂದ್ರ ೮ ಪ್ಯಾಕ್ ತಂದುಕೊಂಡಿಲ್ಲ. ಅವರ ಭುಜಬಲಗಳು ಸಾಕಷ್ಟು ಅಭಿವೃದ್ಧಿಗೊಂಡು ಅವರ ದೇಹಕ್ಕೊಂದು ಹೊಸರೂಪ ಬಂದಿದೆ.
ಈ ರೀತಿ ಕಸರತ್ತು ಮಾಡಿದರೇನೇ ಸಾಧ್ಯ ಎನ್ನುವ ಚೇತನ್ ಚಂದ್ರ ಕನ್ನಡದಲ್ಲಿ ಪಿ.ಯು.ಸಿ., ಪ್ರೇಮಿಸಂ, ರಾಜಧಾನಿ ಹಾಗೂ ಜರಾಸಂಧ ಚಿತ್ರಗಳಲ್ಲಿ ಅಭಿನಯಿಸಿರುವರು. ಜರಾಸಂಧ ಚಿತ್ರೀಕರಣದ ವೇಳೆಯಲ್ಲಿ ನಾಯಕನಟ ವಿಜಯ್ ಅವರ ಶಿಸ್ತುಬದ್ಧ ದೇಹ ಕಾಪಾಡುವ ವಿಷಯಗಳನ್ನು ಅರಿತು ಇವರೂ ಸಹ ಆ ನಿಟ್ಟಿನಲ್ಲಿ ಹೆಜ್ಜೆ ಇಟ್ಟರು. ಆಗಲೇ ಇವರು ಸೇರಿದ್ದು ಕಿಟ್ಟಿ ಮಾಸ್ಟರ್ ಮಸಲ್ ಗರಡಿಗೆ. ೨ ತಿಂಗಳು ಸಾಧಾರಣ ವರ್ಕ್ಔಟ್ ಮಾಡಿದ ನಂತರ ೫ ತಿಂಗಳುಗಳಲ್ಲಿ ಚೇತನ್ ಚಂದ್ರ ಅವರಿಗೆ ಯಾವ ರೀತಿಯ ಆಹಾರದ ನೀಡುವಿಕೆ ಅಗತ್ಯ ಎಂದು ನಿರ್ಧರಿಸಿ ಇತಿಮಿತಿಯ ಪಾಠ ಮಾಡಿ ಅವರನ್ನು ೮ ಪ್ಯಾಕ್ಗೆ ತಯಾರಿ ಮಾಡಲಾಗಿದೆ. ಕೇವಲ ಹಣ್ಣು ತರಕಾರಿ, ಮೊಟ್ಟೆ, ಚಪಾತಿ ಲಿಮಿಟ್ಲ್ಲಿ ಸ್ವೀಕರಿಸಿ ನೀರು ಕುಡಿಯುವುದನ್ನು ಅಳತೆಯಲ್ಲೇ ಸೇವಿಸಿ ದಿವಸಕ್ಕೆ ೧೨ ಗಂಟೆಗಳ ವ್ಯಾಯಾಮ ಮಾಡಿ ಪಡೆದ ಈ ಮೈಕಟ್ಟು ಎನ್ನುತ್ತಾರೆ ಚೇತನ್ ಚಂದ್ರ. ಕಳೆದ ೮ ತಿಂಗಳಿನಿಂದ ಬಾಯಿಗೆ ಬೀಗ ಹಾಕಿ ತಿನ್ನುವ ಆಸೆಯನ್ನು ಪಕ್ಕಕ್ಕೆ ಇಟ್ಟು ಈ ಇಂಜಿನಿಯರಿಂಗ್ ಪದವೀದರನಾದ ಚೇತನ್ ಚಂದ್ರ ಅಳವಡಿಸಿಕೊಂಡಿದ್ದು.
ಮಲೇಶಿಯಾದಲ್ಲಿ ಮೈನಿಂಗ್ ಇಂಜಿನಿಯರ್ ಆಗಿರುವ ಕೆ.ಬಿ.ರಾಮಚಂದ್ರ ಹಾಗೂ ಶ್ರೀಮತಿ ಅನಸೂಯ ಬಿ.ಎನ್. ಅವರ ಪುತ್ರ ಚೇತನ್ ಚಂದ್ರ ಅವರ ಕುಟುಂಬದಲ್ಲಿ ನಿತಿನ್ ಚಂದ್ರ ಎಂಬ ಸಹೋದರನೂ ಇದ್ದಾನೆ.
ಇಷ್ಟೆಲ್ಲ ವ್ಯವಸ್ಥಿತ ರೀತಿಯಲ್ಲಿ ಸಿದ್ಧಗೊಂಡಿರುವ ಚೇತನ್ ಚಂದ್ರ ಸದ್ಯದಲ್ಲೇ ತಯಾರಾಗುವ ಸಾಹಸ ಪ್ರದಾನ ಚಿತ್ರ ’ಸಿಂಹರಾಶಿ’ ಚಿತ್ರಕ್ಕೆ ನಾಯಕನಾಗಿ ಆಯ್ಕೆಯಾಗಿದ್ದಾರೆ. ಮನರಂಜನೆಯಿಂದ ಸಂತೋಷ ಪಡುತ್ತಿದ್ದ ನಾನು ಈಗ ಮನರಂಜನೆ ನೀಡುವುದೇ ಮುಖ್ಯ ಗುರಿ ಎಂದು ನಂಬಿದ್ದಾರೆ. ’ಸಿಂಹರಾಶಿ’ ಚಿತ್ರವನ್ನು ಡಿ.ಕೆ.ಚಂದ್ರಹಾಸ್ ನಿರ್ದೇಶನ ಮಾಡಲಿದ್ದು ಗುಲ್ಬರ್ಗಾ ಮೂಲದ ಸಿದ್ಧು ಪಾಟೀಲ್ ಇದರ ನಿರ್ಮಾಪಕರು.
ಅಂದ ಹಾಗೆ ಏಪ್ರಿಲ್ ೧೦ ಚೇತನ್ ಚಂದ್ರ ಅವರ ಹುಟ್ಟುಹಬ್ಬ. ಈ ವರ್ಷದ ಹುಟ್ಟುಹಬ್ಬಕ್ಕೆ ಅವರ ಮೈಮಾಟವನ್ನೇ ಬದಲಿಸಿಕೊಂಡಿದ್ದಾರೆ. ಶುಭವಾಗಲಿ ಎಂದು ಹಾರೈಸೋಣ.